Tuesday, March 22, 2022

ಜಡೆಕವನಗಳು ಸಾನೆಟ್ ಕವಿತೆ ಕನ್ನಡ ಸಾಹಿತ್ಯ

ಬತ್ತದ ತೊರೆ ಸ್ನೇಹ ಬಳಗದಿಂದ ಜಡೆಕವನಗಳ ಸಂಗ್ರಹ 

  🌷 ಶೀರ್ಷಿಕೆ - ಬೊಂಬೆಯಾಟ🌷


ಬಾನ ತುಂಬೆಲ್ಲ ಚೆಲ್ಲೈತೆ ಬಣ್ಣದ ಓಕುಳಿ

ಓಕುಳಿಯೊಳಗಡಗಿದೆ ವರ್ಣ ರಂಗೋಲಿ

ರಂಗೋಲಿ ಬಿಡಿಸ್ಯಾವ ಆಗಸದಿ ಚಿತ್ತಾರ

ಚಿತ್ತಾರದಲ್ಲಡಗಿದೆ ಅರ್ಥ ವಿಸ್ತಾರ

ವಿಸ್ತಾರವೀ ಬಾನು ಸೋಜಿಗದ ಆಲಯ

ಆಲಯದ ತುಂಬೆಲ್ಲ ದೈವ ಸಾಕ್ಷಾತ್ಕಾರ

ಸಾಕ್ಷಾತ್ಕಾರವಾಗಲೀ ಜೀವನ

ಜೀವನದ ಪಥದೊಳಡಗಿದೆ ಬದುಕಿನ ಸತ್ಯ

ಸತ್ಯವಿದ್ದರೆ ಎತ್ತಲೂ ಭಯವಿಲ್ಲವಯ್ಯ

ಭಯವಿಲ್ಲವೀ ಜಗದಿ ಹರಿಯಿರಲು

ಹರಿಯಿರಲು ನಡೆವುದೀ ಜೀವನ ನಾಟಕ

ನಾಟಕದ ಸೂತ್ರಧಾರಿಯೆ ಅವನು

ಅವನ ನಡೆಯಂತೆ ನಡೆವ ಬೊಂಬೆಗಳು

ಬೊಂಬೆಗಳಿಗೆ ಜೀವವಿತ್ತು ಆಡಿಸುವವನು

ಆಡಿಸುವನಾತ ಈ ಜೀವದಲೆಯ

ಜೀವದಲೆಯ ಉಸಿರ ನಿಯಾಮಕನೇ ಅವನು//


ಶಂಕರ ಕುಲಾಲ ಪರ್ಕಳ

ಉಡುಪಿ ತಾಲೂಕು ಮತ್ತು ಜಿಲ್ಲೆ.


ಶೀರ್ಷಿಕೆ:-ಬೆಳದಿಂಗಳ ಬೆಳಕು


ಬೆಳದಿಂಗಳ ಬೆಳಕಲ್ಲಿ ಹಾಕುವಳು ರಂಗೋಲಿ

ರಂಗೋಲಿಯ ಚಿತ್ತಾರದ ಸೊಬಗೀನ ಮುತ್ತೈದೆ

ಮುತೈದೆ ಮೂಗಲ್ಲಿ ಮುತ್ತಿನ ಮೂಗೂತಿ

ಮೂಗೂತಿ ಮಿನುಗಿದರೆ ನಕ್ಷತ್ರ ಹೊಳೆದಂತೆ

ಹೊಳೆಯುವ ಬೆಳಕೆಲ್ಲ ಕಾಮನ ಬಿಲ್ಲಂತೆ

ಬಿಲ್ಲಿಗೆ ಹೂಡ್ಯಾನ ಮನ್ಮತ ಹೂಬಾನ

ಬಾನೀನ ರಭಸಕ್ಕೆ ಪ್ರೀತಿಯ ಹೂಮಳೆ

ಮಳೆ ಬಂದರೆ ಭೂತಾಯಿಗೆ ಎಲ್ಲಿಲ್ಲದ ಉಲ್ಲಾಸ

ಉಲ್ಲಾಸ ಮರೆತರೆ ಬಾಡುವುದು ನೈದಿಲೆ

ನೈದಿಲೆ ನೋಡಲು ಕಣ್ಣಿಗೆ ಶೃಂಗಾರು

ಶೃಂಗಾರದ ಕಾವ್ಯ ರತ್ನಾಕರ ಬರೆದಂತೆ

ಬರೆದಂತ ಗ್ರಂಥೋಳು ಭರತೇಶನ ವೈಭವ

ವೈಭವದ ಮೆರವಣಿಗೆ ಕುಣಿಯುತ ಮಾಡ್ಯಾರು

ಮಾಡಿದ ಮಹನಿಯರು ಸ್ವರ್ಗದಿ ಬಂದಿಹರು

ಬಂದಂತ ಬಾಲ್ಯಾರು ಬೀದಿಗೆ ಅಲಂಕಾರ

ಅಲಂಕಾರದಿ ಬಿಡಿಶಾರು ಚಿತ್ತಾರದ ರಂಗೋಲಿ


✍️ಬಾಹುಬಲಿ ಬಿರಾದಾರ ಪಾಟೀಲ ಜಮಖಂಡಿ


ರಂಗೋಲಿ :


ಬಿಡಿಸಬೇಕಿದೆ ನೀ ಬರುವ ದಾರಿಯಲಿ ರಂಗೋಲಿಯನು

ರಂಗೋಲಿ ಚುಕ್ಕಿಗಳಿಡಲು ಕರೆಯಲಾ ತುಂತುರು ಮಳೆಯನು


ಮಳೆ ಮಿಂಚು ಮನದಲ್ಲಿಂದು ನಿನಗಾಗಿ ಮಿಡಿದಿದೆ ಹೃದಯ 

ಹೃದಯದಲ್ಲಿ ಆವರಿಸಿ ನೀ ಅದೇನು ಮಾಡಿದೆ  ಸಂಚು

ಸಂಚಾರಿಯಾಗಿ ಭಾವಗಳ ಬೀದಿಯಲ್ಲಿ ಅಲೆದೆ

ಅಲೆದು  ಚುಕ್ಕಿಗಳಿಂದ ಚುಕ್ಕಿಗೆ ಸೇರುವ ರಂಗೋಲಿ


ರಂಗೋಲಿ ಗೆರೆಯಂತೆ ಬಾಳು ನಿನ್ನೆಡೆಗೆಯೇ ಸೇರಿದೆ

ಸೇರಿದೆ ಹಲವು ತಿರುವುಗಳ ದಾಟಿ ಮನವೆರೆಡು

ಮನದ ಮುಗಿಲಲ್ಲಿ  ನಿನ್ನದೆ ಚಿತ್ತಾರ ಬಿಡಿಸಿರುವೆ

ಬಿಡಿಸುತಲಿ ನಿನ್ನ ಚಿತ್ರವನ್ನು ಮೈಮರೆತೆ ನನ್ನಲ್ಲೇ


ನನ್ನಲ್ಲೇ ಕಳೆದೆ ನಿನ್ನೋಲವ ಸಿಂಚನದಿ ಮಿಂದು 

ಮಿಂದು ನಿಂದೆ ರಂಗು ರಂಗಿನ ಕನಸಿನಲಿ

ಕನಸಿನ ಕಾನನದಲಿ ಭಾವ ಭೃಂಗ ಹಾರಾಡಿದೆ

ಹಾರಿ ನನ್ನಡೆಗೆ ಬಂದು ನೆನಪು ಮನಕೆ ತಂಪಾಗಿಸಿದೆ

ತಂಪಾಗಿಸಿ  ಕಂಪು ಸೂಸಿದೆ ಮನದ ಹೂದೋಟಕೆ

ಹೂದೋಟದಲಿ  ಭಾವಕುಸುಮ ಮೊಗ್ಗೊಡೆದಿದೆ


✍ಅಂಜಲಿ ಶಿದ್ಲಿಂಗ್ 


ಪದ : ರಂಗೋಲಿ

ಅಂಗಳದ ತುಂಬೆಲ್ಲಾ ಸುಂದರ ರಂಗೋಲಿಯು

ರಂಗೋಲಿಯಲಿ ತುಂಬಿದೆ ಹಲವಾರು ಬಣ್ಣಗಳು


ಬಣ್ಣಗಳು ಹೊಳೆಯುತಿವೆ ಇಂದ್ರಧನುವಿನಂತೆ

ಇಂದ್ರಧನುವೇ ಇಂದು ಧರೆಗಿಳಿದು ಬಂದಂತೆ


ಬಂದಿಹರು ದೇವಾನುದೇವರುಗಳೇ ಧರೆಯಲ್ಲಿ

ಧರೆಯೆಲ್ಲಾ ಕಂಗೊಳಿಸಿದೆ ರಂಗೋಲಿಯಲ್ಲಿ


ರಂಗೋಲಿಯ ಚಿತ್ತಾರವೆ ರಸ್ತೆಯ ಇಕ್ಕೆಲವೂ

ಇಕ್ಕೆಲವೂ ಹೊಳೆಯುತಿದೆ ಬಹು ಸುಂದರವಾಗಿ


ಸುಂದರವಾದ ಮಧುರ ಅನುಭೂತಿ ಮನದಲ್ಲಿ

ಮನವು  ತಲೆದೂಗಿರಲು ಭಾವಪರವಶತೆಯಲ್ಲಿ


ಭಾವಪರವಶರಾಗಿ ಪೂಜಿಸುವೆವು ದೇವರನು

ದೇವರ ನಾಮದಿಂದ ಧನ್ಯತೆಯು ಜೀವನದಲಿ


ಜೀವನವು ಸಿಕ್ಕಿರುವುದು ಭಗವಂತನ ಕೃಪೆಯಿಂದ

ಕೃಪೆಯಿರಲು ಭಗವಂತನ ಸ್ವರ್ಗ ಸಮಾನ ಬದುಕು


ಬದುಕಿರುವುದು  ರಂಗೋಲಿಯ ಬಣ್ಣಗಳಂತೆ

ಬಣ್ಣಗಳಂತೆ ಸುಖ ಧುಃಖಗಳು ಸಮಾನವಂತೆ


ಅನುರಾಧಾ ಕುಲ್ಕರ್ಣಿ🌺🌺

ಗೃಹಿಣಿ

ಕೋಲ್ಕತ್ತಾ

🌹ಬತ್ತದ ತೊರೆ ಸ್ನೇಹಬಳಗ🌹

ವಿಷಯ : ಜಡೆಕವನ ರಚನೆ

ಶೀರ್ಷಿಕೆ : 🌷ರಂಗೋಲಿ🌷


ಹೃದಯದ ಅಂಗಳದಲ್ಲಿ ರಂಗಿನ ಚಿತ್ತಾರ

ಚಿತ್ತಾರದಿ ಬೆಸೆದಿರಲು ಗೆರೆಗಳ ಅನುಬಂಧ

ಅನುಬಂಧಕೆ ತುಂಬಿದ ವರ್ಣಗಳ ಅಲಂಕಾರ

ಅಲಂಕಾರಕೆ ಮೆರುಗು ನೀಡಿರಲು ನೀರೆಯರು 

ನೀರೆಯರ ಕರದಿಂದ ಮೂಡಿರಲು ರಂಗೋಲಿ

ರಂಗೋಲಿಯಲ್ಲಿ ಬಿಂಬಿತವಾದ ಮನೋಭಾವ

ಮನೋಭಾವದಿ ಅರಳಿರಲು ಹೊಸ ಸಂಭ್ರಮ

ಸಂಭ್ರಮದಿ ಕಣ್ಮನಗಳಿಗೆ ಹರುಷದ ಉಲ್ಲಾಸ

ಉಲ್ಲಾಸದ ಸಡಗರವು ಸಾರುತ್ತಿರಲು ಸಂಸ್ಕೃತಿ

ಸಂಸ್ಕೃತಿಯ ಆಚರಣೆಗೆ ಸೂಚಕವು ರಂಗವಲ್ಲಿ

ರಂಗವಲ್ಲಿಯಿಂದ ಮನೆಯಂಗಳದಿ ನವ ಶೋಭೆ

ಶೋಭೆಯಲ್ಲಿ ಅರಳಿದೆ ಹೆಂಗಳೆಯರ ಕಲಾತ್ಮಕತೆ

ಕಲಾತ್ಮಕತೆಯ ಕೌಶಲ್ಯಕೆ ಸೋತಿರಲು ವೀಕ್ಷಕರು

ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರಲು ಸ್ತ್ರೀವೃಂದ

ಸ್ತ್ರೀವೃಂದಕೆ ಸಾರ್ಥಕ್ಯದ ನಗುವು ಮೂಡಿರಲು

ಮೂಡಿಹ ನಗು ಅಳಿಯದೆ ಉಳಿಯಲೆಂದೆಂದಿಗೂ 


 ✍️ಸವಿತಾ ನಾಗರಾಜ್

      ಹೈದರಾಬಾದ್


ವಿಷಯ:-ರಂಗೋಲಿ

*ಶೀರ್ಷಿಕೆ:-ಅಂಗಳದಿ ನಗುವ ಚೆಲುವೆ*

ಅಂಗಳದಿ ಅರಳಿದೆ ತರತರದ ರಂಗೋಲಿ

ರಂಗೋಲಿಯು ಹೊಳೆದಿದೆ ನವರಂಗಿನ ಚೆಲುವಲಿ

ಚೆಲುವೆಯೆದೆಯಲಿ ಆನಂದ ತುಂಬಿ ತುಳುಕೈತೆ

ತುಳುಕದಂಥ ಸೌಂದರ್ಯ ಕಣ್ಣ ಮುಂದೈತೆ

ಮುಂದೆ ಮುಂಬಾಗಿಲಲಿ ನಗುತ ನಿಂತೈತೆ

ನಿಂತು ನೋಡುತಿರುವೆ ಸೊಬಗ ಸಿರಿಯನು

ಸಿರಿಯು ಇವಳೆ ಮನಮೆಚ್ಚಿದ ಮಡದಿಯು

ಮಡದಿ ಕೈಯಲಿ ಮೆರೆದಿದೆ ಗೋರಂಟಿ ಚಿತ್ರವು

ಚಿತ್ರ ಕೂಗಿ ಕರೆದಿದೆ ನೂರು ಆಸೆ ತೆರೆದಿದೆ

ತೆರೆದ ಹೃದಯ ಇವಳಿಗೆ ಎಂದೋ ಮೀಸಲಾಗಿದೆ

ಮೀಸಲಿಟ್ಟ ಒಲವಿಗೆ ಒಡತಿ ಅವಳೆ ಅಲ್ಲವೇ,

ಅಲ್ಲವೇ ನನ್ನ ಚೆಲುವೆ ನಿನ್ನ ನಗುವಲಿ ನನ್ನ ಗೆಲುವೆ

ಗೆಲುವು ಸಿಕ್ಕಿ ಜೀವನಕೆ ನಲಿವು ಮೂಡಿದೆ

ಮೂಡಿದೆ ಮುಂಜಾನೆಯ ರವಿಯ ಹೊಂಬಣ್ಣ

ಬಣ್ಣದಲಿ ಕಂಡೆನು ಇವಳ ಒಲವ ಕಣ್ಣ

ಕಣ್ಣಮುಚ್ಚಿ ಕುಳಿತರು ಕಾಡುವ ಸೊಬಗು ಅವಳದು.


*ಆನಂದಜಲ,ಶಿಕ್ಷಕಿ*

   *ತುರುವೇಕೆರೆ*



*ಪದ- ರಂಗೋಲಿ*


*ಶೀರ್ಷಿಕೆ- ಮನೆಯೊಡತಿ*


ಮುಂಜಾವದ ಸುಂದರ ಸಮಯದಲ್ಲಿ

ಸಮಯದಲ್ಲಿ ಮನೆ ಒಡತಿಯು ಅಂಗಳದಲ್ಲಿ

ಅಂಗಳದಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿ

ರಂಗೋಲಿಯ ಹೊಸ ವಿನ್ಯಾಸಗಳು ಸುಂದರ

ಸುಂದರವಾಗಿ ಆ ದಿನಕ್ಕೆ ಶುಭ ಕೋರುತಲಿ

ಶುಭ ಕೋರುತಲಿ ದಿನದ ಕೆಲಸದ ಪ್ರಾರಂಭವು

ಪ್ರಾರಂಭವಾಯಿತು ದಿನದ ಗಡಿಬಿಡಿಯಲ್ಲಿ

ಗಡಿಬಿಡಿ ಆ ಸಮಯದಲ್ಲಿ ಮನೆ ಒಡತಿಯು

ಒಡತಿಯು ದೇವರ ನೆನೆಯುತ್ತ ಮನೆಗೆಲಸವೂ

ಮನೆಗೆಲಸ ಮಾಡುತ್ತಲಿ ಮನೆ ಅವರನ್ನೆಲ್ಲ

ಮನೆಯವರೆಲ್ಲರ ಇಷ್ಟವನ್ನು ಅರಿತು ನಡೆದಳು

ನಡೆದಳು ಕೆಲಸ-ಕಾರ್ಯಗಳ ಮಾಡುತ್ತ ನಗುತಲಿ

ನಗುತಲಿ ಮನೆ ಮಂದಿಯ ಮನಗೆದ್ದಳು

ಗೆಲ್ಲುವಳು ಮನೆಯ ಬೆಳಗಿ ಗೃಹಲಕ್ಷ್ಮಿ ತಾನಾಗಿ 

ತಾನಾಗಿ ಮನೆಯನ್ನು ಸುರಕ್ಷಿತವಾಗಿ ಇರುಸುವಳು

ಇರುಸುವಳು ಮನೆಯ ಗೌರವವನ್ನು ಕಾಪಾಡುವಳು.


*ಕೆ ಆರ್ ಉಷಾ ದಿದ್ದಿಗಿ*

ಹೈದರಾಬಾದ್


ಜಡೆ ಕವನ

ದತ್ತ ಪದ..ರಂಗೋಲಿ.


ಶೀರ್ಷಿಕೆ . ರಾಂಗಾದ ರಂಗೋಲಿ.


ರಂಗು ರಂಗಿನ ರಂಗಾದ ರಂಗೋಲಿ

ರಂಗೋಲಿ ಹಾಕೋಣ ನಾವೆಲ್ಲ ಸೇರಿ

ಸೇರಿ ಗೆಳತಿಯರೆ ರಂಗೋಲಿ ಸ್ಪರ್ಧೆಗೆ

ಸ್ಪರ್ಧೆಗೆ ಸ್ಫೂರ್ತಿ ನಿಮ್ಮ ನಗುವೇ ನೋಡಿ.

ನೋಡಿ ಆನಂದಿಸಿ ಹೇಳಬೇಕು ಎಲ್ಲರೂ

ಎಲ್ಲರೂ ಹಾಕುವರು ರಂಗೋಲಿ ಆದರೆ

ಆದರೆ ಬತ್ತದ ತೊರೆಯಲ್ಲಿರುವ ಕನ್ಯಾ ಮಣಿಗಳ ಹಾಗಲ್ಲ ನೋಡಿ.

 ನೋಡಿ ಯಾರಿಗೂ ಬರಲ್ಲ ಇಂತಹ ರಂಗೋಲಿ

ರಂಗೋಲಿ ಹಾಕುವವರು ದಿನನಿತ್ಯ ಇಲ್ಲಿ

ಇಲ್ಲಿ ನಡೆಯುವುದು ದಿನನಿತ್ಯ ಒಂದು ಸ್ಪರ್ಧೆ

ಸ್ಪರ್ಧೆ ಹೆಸರಲ್ಲಿ ಹಂಚುವರು ಪ್ರೀತಿ

ಪ್ರೀತಿಯ ಜೊತೆಗೆ ಸಾಹಿತ್ಯದ ಸಿಂಚನ

ಸಿಂಚನ ಮೂಡಿಸಿದೆ ಮನದಲ್ಲಿ  ಸಾಹಿತ್ಯ ಚಿತ್ತಾರ

ಸಾಹಿತ್ಯ ಸುಧೆಯ ಸವಿಯೋಣ ಬನ್ನಿ

ಬನ್ನಿ ನಾವೆಲ್ಲ ಬೇಳೆಯೋಣ ಎಲ್ಲರನ್ನು ಬೆಳೆಸುತ್ತಾ.ಸಾಗೋಣ ಮುಂದೆ.


ನಾಗವೇಣಿ ಹೀರೆಮಠ

ಕಲಬುರ್ಗಿ.


: ಜಡೆಕವನ ರಚನೆ


*ವಿಷಯ :ರಂಗೋಲಿ*

*ಶೀರ್ಷಿಕೆ: ಬರೆದೆ ನಿನ್ನ ಚಿತ್ತಾರವ

ಮನದೊಳಗೆ ಬರೆದೆ ನಿನ್ನ ಚಿತ್ತಾರವ

ಚಿತ್ತಾರವ ಬಿಡಿಸ ಹೊರಟೆ ಕಲ್ಪನೆಯೊಳು

ಕಲ್ಪನೆಯೊಳು ರಂಗೋಲಿಯ ಹಾಕಲೇ

ಹಾಕಲೇ ನಿನ್ನ ನಗುಮೋರೆಯ ಚಂದವ

ಚಂದವ ಚುಕ್ಕಿಗಳಂಗಳದಿ ಬಿತ್ತಲೇ

ಬಿತ್ತಲೇ ಮುಖದೊಳಿಹ ಮಂದಸ್ಮಿತವ

ಮಂದಸ್ಮಿತವ ಮುದಗೊಳಿಪ ಅಲಂಕಾರವ

ಅಲಂಕಾರವ ಮಾಡಲೇ ಬಣ್ಣದೊಳಗೆ

ಬಣ್ಣದೊಳಗೆ ಮೂಡಿಹ ಚಿತ್ರವೇ ನಾಚಿದಂತಿದೆ

ನಾಚಿದಂತಿದೆ ಬಳುಕಿ ಎನ್ನ ನೋಡಿ ಕರೆದಂತಿದೆ

ಕರೆದಂತಿದೆ ಆ ಕುಡಿ ಹುಬ್ಬ ಚೆಲುವು 

ಚೆಲುವು ಕಂಡೆನ್ನ ಮನವು ನಲಿದಂತೆ

ನಲಿದಂತೆ ಆ ಕಣ್ಣ‌ಸನ್ನೆ ಮೋಡಿಮಾಡಿ ಸೆಳೆಯಲು

ಸೆಳೆಯಲು ಬರೆದ ಮುಗುಳು ನಗೆಯ ಚಿತ್ರವು

ಚಿತ್ರವು ಜೀವ ಪಡೆದೆನ್ನ ಮೈಯ ಸೋಕಿದಂತಾಗಲು

ಸೋಕಿದಂತಾಗಲು ಬಣ್ಣದೊಳಗವಿತೆನ್ನ ಕಾಡಿರಲು



*ಸುಮನ.ಜಿ.ಕಾರಂತ್*

*ಮೂಡಬಿದ್ರಿ*


No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...